ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂತೋಷದ ಜೀವನಮಾರ್ಗ

ಇಲ್ಲಿದೆ ನೋಡಿ

ಇಲ್ಲಿದೆ ನೋಡಿ

ಈಗಾಗಲೇ ಸಂತೋಷವಾಗಿದ್ದೀರಿ ಅಂತ ನಿಮಗನಿಸುತ್ತಾ? ನಿಮ್ಮ ಈ ಸಂತೋಷಕ್ಕೆ ಕಾರಣ ನಿಮ್ಮ ಕುಟುಂಬನಾ, ಕೆಲಸನಾ, ಧಾರ್ಮಿಕ ನಂಬಿಕೆನಾ? ಅಥವಾ ಮುಂದೆ ನಿಮಗೆ ಸಂತೋಷ ತರಲಿರುವ ಒಂದು ವಿಷಯಕ್ಕಾಗಿ ಕಾತರದಿಂದ ಎದುರುನೋಡುತ್ತಿದ್ದೀರಾ? ಬಹುಶಃ ನಿಮ್ಮ ಓದು ಮುಗಿಯಲಿದೆ, ಒಳ್ಳೇ ಉದ್ಯೋಗ ಸಿಗಲಿದೆ ಅಥವಾ ಹೊಸ ಕಾರು ಖರೀದಿಸಲಿದ್ದೀರಿ.

ಅನೇಕ ಜನರು ತಮಗಿದ್ದ ಯಾವುದೊ ಗುರಿ ಮುಟ್ಟಿದಾಗ ಅಥವಾ ತುಂಬ ಆಸೆಪಟ್ಟ ವಸ್ತು ಅವರಿಗೆ ಸಿಕ್ಕಿದಾಗ ಸ್ವಲ್ಪಮಟ್ಟಿಗೆ ಸಂತೋಷ ಪಡೆಯುತ್ತಾರೆ. ಆದರೆ ಆ ಸಂತೋಷ ಎಷ್ಟು ಸಮಯ ಉಳಿಯುತ್ತದೆ? ಸಾಮಾನ್ಯವಾಗಿ ಅದು ಸ್ವಲ್ಪ ಸಮಯ, ತಾತ್ಕಾಲಿಕವಾಗಿ ಇರುತ್ತದೆ. ಇದರಿಂದ ನಿರಾಶೆ ಆಗುತ್ತದೆ.

ಸಂತೋಷ ಎನ್ನುವುದು ಕ್ಷಣಮಾತ್ರಕ್ಕೆ ಇದ್ದು ಹೋಗುವ ಒಂದು ವಿಷಯವಲ್ಲ. ಅದು ಯಾವಾಗಲೂ ಇರುವ ಭಾವನೆ ಆಗಿದೆ. ಅದರಲ್ಲಿ ಸಂತೃಪ್ತರಾಗಿ ಇರುವುದರಿಂದ ಹಿಡಿದು ಬದುಕಿನಲ್ಲಿ ತುಂಬ ಆನಂದಿಸುವುದು ಸೇರಿದೆ. ಈ ಕಾರಣಗಳಿಗಾಗಿ ಸಂತೋಷವನ್ನು ಮುಟ್ಟಬೇಕಾದ ಒಂದು ಗುರಿ ಎಂದಲ್ಲ, ಬದಲಾಗಿ ಒಂದು ಪ್ರಯಾಣವೆಂದು ವರ್ಣಿಸಲಾಗಿದೆ. ಹಾಗಾಗಿ ‘ಇದು ಇದ್ರೆ ಮಾತ್ರ ಸಂತೋಷವಾಗಿರ್ತೇನೆ, ಅದು ಇದ್ರೆ ಮಾತ್ರ ಸಂತೋಷವಾಗಿರ್ತೇನೆ’ ಅಂತ ಹೇಳಿದರೆ ನಾವು ಒಂದರ್ಥದಲ್ಲಿ ಸಂತೋಷವನ್ನು ಮುಂದೂಡುತ್ತಿದ್ದೇವೆ.

ಇದನ್ನು ಅರ್ಥಮಾಡಲಿಕ್ಕೆ, ಸಂತೋಷವನ್ನು ಒಳ್ಳೇ ಆರೋಗ್ಯಕ್ಕೆ ಹೋಲಿಸೋಣ. ಶಾರೀರಿಕವಾಗಿ ಕ್ಷೇಮದಿಂದಿರಲು ನಾವೇನು ಮಾಡುತ್ತೇವೆ? ಪಥ್ಯ, ವ್ಯಾಯಾಮ, ಜೀವನಶೈಲಿ ಇದೆಲ್ಲದ್ದರಲ್ಲಿ ಒಂದು ನಿರ್ದಿಷ್ಟ ಕ್ರಮ ಅಥವಾ ಮಾರ್ಗವನ್ನು ಅನುಸರಿಸುತ್ತೇವೆ. ಹಾಗೆಯೇ ನಾವು ಜೀವನದಲ್ಲಿ ಒಳ್ಳೇ ಮಾರ್ಗವನ್ನು ಅನುಸರಿಸುವಾಗ, ಭರವಸಾರ್ಹ ತತ್ವಗಳಿಗನುಸಾರ ಜೀವಿಸುವಾಗ ಅದರ ಪರಿಣಾಮವಾಗಿ ನಾವು ಸಂತೋಷವಾಗಿರುತ್ತೇವೆ.

ಸಂತೋಷದ ಜೀವನಮಾರ್ಗದಲ್ಲಿ ನಡೆಯಲು ಯಾವ ತತ್ವಗಳನ್ನು ಪಾಲಿಸಬೇಕು, ಯಾವ ಗುಣಗಳನ್ನು ತೋರಿಸಬೇಕು? ಈ ಮುಂದಿನ ತತ್ವಗಳು ಮತ್ತು ಗುಣಗಳು ತುಂಬ ಮುಖ್ಯ ಪಾತ್ರ ವಹಿಸುತ್ತವೆ. ಇವು ಬೇರಾವುದೇ ವಿಷಯಗಳಿಗಿಂತ ಹೆಚ್ಚು ಮುಖ್ಯವಾಗಿವೆ:

  • ಸಂತೃಪ್ತಿ ಮತ್ತು ಉದಾರಭಾವ

  • ಆರೋಗ್ಯ ಮತ್ತು ಚೇತರಿಸಿಕೊಳ್ಳುವ ಶಕ್ತಿ

  • ಪ್ರೀತಿ

  • ಕ್ಷಮೆ

  • ಜೀವನಕ್ಕೆ ಉದ್ದೇಶ

  • ನಿರೀಕ್ಷೆ

ಅಪಾರವಾದ ವಿವೇಕಕ್ಕೆ ಹೆಸರುವಾಸಿ ಆಗಿರುವ ಒಂದು ಪುಸ್ತಕ ಹೀಗನ್ನುತ್ತದೆ: “ಸದಾಚಾರಿಗಳಾಗಿ ನಡೆಯುವವರು ಧನ್ಯರು” ಅಥವಾ ಸಂತೋಷಿತರು. (ಕೀರ್ತನೆ 119:1) ಸದಾಚಾರದ ಆ ಮಾರ್ಗದ ಬಗ್ಗೆ, ಅಂದರೆ ಆ ಆರು ತತ್ವಗಳು ಮತ್ತು ಗುಣಗಳ ಬಗ್ಗೆ ವಿವರವಾಗಿ ನೋಡೋಣ.